ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ನಡೆಸಿ ಹರಿಹಾಯ್ದಿದ್ದಾರೆ.
1985 ರಲ್ಲಿ ಡಿಕೆ ಶಿವಕುಮಾರ್ ಹಾಗೂ ನಾನು ಜೊತೆಯಾಗಿ ರಾಜಕಾರಣಕ್ಕೆ ಬಂದವರು. ಆಗ ಡಿಕೆಶಿ ಹರಿದ ಚಪ್ಪಲಿ ಹಾಕಿಕೊಳ್ಳುತ್ತಿದ್ದರು. ಭ್ರಷ್ಟಾಚಾರ ಮಾಡಿ ಸಾವಿರಾರು ಕೋಟಿ ಮಾಲೀಕರಾಗಿದ್ದಾರೆ. ಓರ್ವ ಮಹಿಳೆಯನ್ನು ಮುಂದಿಟ್ಟುಕೊಂಡು ನನ್ನ ವೈಯಕ್ತಿಕ ತೆಜೋವಧೆ ಮಾಡಿದರು ಎಂದು ತಿಳಿಸಿದರು.
ಶಿವಕುಮಾರ್ ಹಾಗೂ ನನ್ನ ನಡುವಿನ ಸಂಬಂಧ ಹಾಳಾಗಲು ಆ ಶಾಸಕಿಯೇ ಕಾರಣ ಎಂದು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಹರಿಹಾಯ್ದರು. ನಾವಿಬ್ಬರೂ ಅಣ್ಣ-ತಮ್ಮರ ಹಾಗೇ ಇದ್ದವರು. ಅವರಿಂದ ತಾವಿಬ್ಬರೂ ದೂರಾಗಿದ್ದೀವಿ. ಇದೊಂದು ವೈಯಕ್ತಿಕ ಯುದ್ಧ. ಡಿಕೆಶಿ ರಾಜಕಾರಣಿ ಆಗಲಿಕ್ಕೆ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಡಿಯಲ್ಲಿರುವ ಹುಡುಗಿ ಇಬ್ಬರು ಹುಡುಗರು ಹಾಗೂ ಡಿಕೆಶಿ ಅವರನ್ನು ಸಿಬಿಐ ಬಂಧಿಸಿ ವಿಚಾರಿಸಿದಾಗ ಸತ್ಯ ಹೊರಬರುತ್ತದೆ. ನನ್ನ ಬಳಿ 20 ಸಿಡಿಗಳಿವೆ, ಎಲ್ಲವನ್ನು CBI ಗೆ ನೀಡುವೆ . 1985 ರಲ್ಲಿ ಶಿವಕುಮಾರ್ ಅವರು ಚಪ್ಪಲಿ ಹಾಕಿಕೊಂಡು ಇದ್ದರು. ನಾನು ಆ ಸಮಯದಲ್ಲಿ ರ್ಯಾಡೋ ವಾಚ್ ಮತ್ತು ಟೀ ಶರ್ಟ್ ಹಾಕತ್ತಿದೆ. ಸಿಡಿಗೆ ಸಂಬಂಧಪಟ್ಟಂತೆ ಶ್ರವಣ್ ಮತ್ತು ನರೇಶ್ ಅವರನ್ನು ಕೂಡಲೇ ಬಂಧಿಸಬೇಕು ಎಂದರು.
ನನ್ನ ಹೇಳಿಕೆಯನ್ನು ತಿರುಚಿ ಆಡಿಯೋವೊಂದನ್ನು ವೈರಲ್ ಆಗಿದ್ದು, ನಾಳೆ ಏನು ಆದ್ರು ಜಾತಿ ಸಂಘರ್ಷಕ್ಕೆ ಕಾರಣವಾದ್ರೆ ಅದಕ್ಕೆ ಇವರೇ ಕಾರಣ ಅಂತ ತಿಳಿಸಿದರು. ಸಕ್ಕರೆ ಕಾರ್ಖಾನೆಯಲ್ಲಿ ಕೋಟ್ಯಾಂತರ ಅವ್ಯವಾಹರವಾಗಿದ್ದು, ಕಪ್ಪು ಹಣ ಬಿಳಿಯಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಕುರಿತು ಹೇಳಿದರು.