ಮಂಡ್ಯ: ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ ಎಂಬ ಹೆಸರಿನಲ್ಲಿ ಪಾದಯಾತ್ರೆಯೊಂದು ನಡೆಯುತ್ತಿದ್ದು, 30 ವರ್ಷ ದಾಟಿದ ಬ್ರಹ್ಮಚಾರಿಗಳು ಅಂದರೆ, ಇಷ್ಟು ವರ್ಷವಾದರೂ ಹುಡುಗಿ ಸಿಗದ ಯುವಕರು ಈ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ.

30 ವರ್ಷ ಗತಿಸಿದರೂ ಮದುವೆಯಾಗಿಲ್ಲ ಎಂದು 200ಕ್ಕೂ ಹೆಚ್ಚು ಜನ ಯುವಕರು ಬೇಗನೇ ವಧು ಸಿಗಲೆಂದು ಈ ಮೂಲಕ ಪ್ರಾರ್ಥಿಸಲು ಮುಂದಾಗಿದ್ದಾರೆ.

ಜಿಲ್ಲೆಯ ಕೆ.ಎಂ. ದೊಡ್ಡಿಯಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

ಈ ಪಾದಯಾತ್ರೆಯಲ್ಲಿ ಕೇವಲ ಮಂಡ್ಯ ಜಿಲ್ಲೆಯವರಲ್ಲದೇ ಮೈಸೂರು, ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬ್ರಹ್ಮಚಾರಿಗಳು ಭಾಗಿಯಾಗಲಿದ್ದು, ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪಾದಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಅಲ್ಲದೇ, ಈ ಪಾದಯಾತ್ರೆಯಲ್ಲಿ ನಿಶ್ಚಿತಾರ್ಥವಾದವರು ಹಾಗೂ ವಿವಾಹಿತರು ಬರುವಂತಿಲ್ಲ. ಕೇವಲ 30 ವರ್ಷ ದಾಟಿದ ಬ್ರಹ್ಮಚಾರಿಗಳು ಮಾತ್ರ ಭಾಗವಹಿಸಬೇಕು ಎಂದು ಆಯೋಜಕರು ಷರತ್ತು ವಿಧಿಸಿದ್ದಾರೆ.