ವಿಜಯಪುರ: 2023 ಕ್ಕೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನ.1 ರಿಂದ ಉತ್ತರ ಕರ್ನಾಟಕದ 12 ಜಿಲ್ಲೆಗಳಲ್ಲಿ ಪಂಚ ರತ್ನ ಯಾತ್ರೆ ಹಮ್ಮಿಕೊಳ್ಳಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು.

ಮುಂಬೈ ಕರ್ನಾಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಯಾತ್ರೆ ನಡೆಯಲಿದ್ದು, ಮಾಜಿ ದೇವೇಗೌಡರ ಆಶಯಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಿಜೆಪಿಗೆ ಮೋದಿ ಚಿಂತೆ, ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಚಿಂತೆ, ಜೆಡಿಎಸ್ ಗೆ ಮಾತ್ರ ರಾಜ್ಯದ ಚಿಂತೆ ಎಂದ ಇಬ್ರಾಹಿಂ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಯಾತ್ರೆ ಮಾಡುತ್ತಿವೆ. ಕಾರ್ಯಕ್ರಮ ಮಾಡುತ್ತಿವೆ. ಆದರೆ ಜನರಿಗೆ ಏನು ಮಾಡಿದ್ದೇವೆ, ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಕೇವಲ ಪರ್ಸೆಂಟೇಜ್ ವಿಚಾರದಲ್ಲಿ ಹೊಡೆದಾಡುತ್ತಿದ್ದಾರೆ ವಿನಃ ಅಭಿವೃದ್ಧಿ ವಿಚಾರದಲ್ಲಿ ಹೊಡೆದಾಡುತ್ತಿಲ್ಲ. ಆದರೆ ಜೆಡಿಎಸ್ ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ಯಾತ್ರೆ ಮಾಡುತ್ತಿದೆ ಎಂದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿ ಗೆ ಆದ್ಯತೆ ನೀಡಲಿದೆ. ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಗೆ ಆದ್ಯತೆ ನೀಡಲಿದೆ. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವುದು. ಶಿಕ್ಷಣ ಕ್ಷೇತ್ರ, ಮಹಿಳಾ ಸಬಲೀಕರಕ್ಕೆ ಒತ್ತು ನೀಡಲಾಗುವುದು. ಮಹಿಳೆಯರು ಮತ್ತು ಯುವಕರಿಗೆ ಅವರಿದ್ದ ಸ್ಥಳದಲ್ಲಿಯೇ ಉದ್ಯೋಗ ಒದಗಿಸಲಾಗುವುದು. ಗುಡಿಕೈಗಾರಿಕೆ ಅಭಿವೃದ್ಧಿ ಪಡಿಸುವುದಾಗಿ ಪಂಚರತ್ನ ಕಾರ್ಯಕ್ರಮ ದಲ್ಲಿ ಹೇಳಲಾಗಿದೆ ಎಂದರು

ಐದು ವರ್ಷದಲ್ಲಿ ಈ ಎಲ್ಲ ಕಾರ್ಯಕ್ರಮ ಮಾಡದೇ ಹೋದರೆ ಮುಂದೆ ಎಂದೂ ಜನರ ಮುಂದೆ ಬರಲ್ಲ ಎಂದು ಹೇಳಿದ್ದೇವೆ. ಈ ಹಿಂದೆ ಕೊಟ್ಟ ಮಾತು ನಡೆಸಿಕೊಟ್ಟಿದ್ದೇವೆ‌. ದೇವೇಗೌಡರು ಪ್ರಧಾನಿಯಾಗಿದ್ದಾಗ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಿಸಿದರು. ಕುಮಾರಸ್ವಾಮಿ ಸಾಲ ಮನ್ನಾ ಮಾಡಿದರು. ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂದು ಯಾತ್ರೆ ಮಾಡಿದವರು ಕೇವಲ ಯಾತ್ರೆ ಮಾಡಿದರೆ ವಿನಃ ನುಡಿದಂತೆ ನಡೆಯಲಿಲ್ಲ ಎಂದರು.

ಆಂಧ್ರ, ತೆಲಂಗಾಣ, ತಮಿಳುನಾಡು, ಕರ್ನಾಟಕ ಮತ್ತು ಕೇರಳ ಈ ಐದು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ನಾಯಕರು ಸಿಎಂ ಆದರೆ ನಾವೆಲ್ಲರೂ ಒಂದಾಗಿ 2023 ಕ್ಕೆ ದಿಲ್ಲಿ ಬಾಗಿಲು ತಟ್ಟುತ್ತೇವೆ ಎಂದರು.

ಮೀಸಲಾತಿ‌ ವಿಚಾರ:
ರಾಜ್ಯದಲ್ಲಿ ಎಸ್ ಸಿ- ಎಸ್ ಟಿ ಮೀಸಲಾತಿ ಹೆಚ್ಚಳ ವಿಚಾರ ಕೇವಲ ಗಿಮಿಕ್. ಈ ಹಿಂದೆ ಸಂಪೂರ್ಣ ಆರ್ ಎಸ್ ಎಸ್ ನವರಾದ ಬಿ.ಎಸ್. ಯಡಿಯೂರಪ್ಪ ಇದ್ದಾಗಲೇ ಆಗಲಿಲ್ಲ. ಬೊಮ್ಮಾಯಿ ಅಡಬೆರಕಿ ಆರ್ ಎಸ್ ಎಸ್ ಇವರಿಂದ ಆಗುತ್ತದಾ? ಎಂದು ಪ್ರಶ್ನಿಸಿದರು.

ಮೀಸಲಾತಿ ಬಗ್ಗೆ ಪರಾಮರ್ಶೆ ಆಗಬೇಕು. ಈ ಸರ್ಕಾರಕ್ಕೆ ದಿಕ್ಕಿಲ್ಲ, ದೆಸೆಯಿಲ್ಲ‌. ಇವರಿಗೆ ಬದ್ದತೆಯಿದ್ದರೆ ಒಂದು ಕಮಿಟಿ ರಚನೆ ಮಾಡಲಿ. ಮೀಸಲಾತಿ ಕೇಳುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಿ ಎಂದರು‌.

ಆರ್ ಎಸ್ ಎಸ್- ಪಿಎಫ್ ಐ:
ಆರ್ ಎಸ್ ಎಸ್ ಬ್ಯಾನ್ ಅನ್ನುವ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಏನು ಮಾಡಿತು? ಪಿಎಫ್ ಐ ಬ್ಯಾನ್ ಎಂದಾಗ ಸ್ವಾಗತ ಅನ್ನೋರಿಗೆ ರಾಮಸೇನೆ ಅವರು ಚಿಕ್ಕಪ್ಪನ ಮಕ್ಕಳಾ? ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದು ಯಾರು? ಗುಂಡಾಗಳು ಸತ್ತರೆ ಐದು ಲಕ್ಷ ಪರಿಹಾರ ಕೊಡುವವರು ಇವರು. ನಾವಿದ್ದಾಗ ಯಾವುದೇ ಧರ್ಮ ನೋಡದೆ ಹಿಂದು- ಮುಸ್ಲಿಂ ಎಲ್ಲರಿಗೂ ಸಮಾನ ಪರಿಹಾರ ಹಣ ನೀಡಿದ್ದೆವು‌. ನಾನು ಆರ್ ಎಸ್ ಎಸ್ ಆಗಲಿ ಪಿಎಫ್ ಐ ಆಗಲಿ ಯಾವುದನ್ನೂ ನಿಷೇಧ ಮಾಡಿ ಎಂದಿಲ್ಲ. ಏನೇ ಇದ್ದರೂ ಜನರ ಮುಂದಿಡಿ ಎಂದರು.

ಕಾಂಗ್ರೆಸ್ ಗೆ ಮುಸ್ಲಿಂ ರ ಕಾಳಜಿ ಇಲ್ಲ
ರಾಜ್ಯದ 70 ವರ್ಷದ ಇತಿಹಾಸದಲ್ಲಿ ಮುಸ್ಲಿಂರಿಗೆ ರಾಜ್ಯಾಧ್ಯಕ್ಷ ಮಾಡಿದ್ದು ಜೆಡಿಎಸ್ ಮಾತ್ರ. ಕಾಂಗ್ರೆಸ್ ಏನು ಮಾಡಿದೆ? ಎಂದು ಪ್ರಶ್ನಿಸಿದ ಇಬ್ರಾಹಿಂ, ಅಲ್ಪಸಂಖ್ಯಾತ ರು ಕಾಂಗ್ರೆಸ್ ನ್ನು ನಂಬಬೇಡಿ. ಅವರು ಕೇವಲ ಕಣ್ಣೊರೆಸುವ ತಂತ್ರ ಎಂದರು.