ಬೆಳಗಾವಿ: ರಾಜ್ಯ ಸರ್ಕಾರ ಕನ್ನಡ ನಾಡು ನುಡಿ ರಕ್ಷಣೆ ಹೋರಾಟದಲ್ಲಿ ಮುಂಚೂಣಿಯಾಗಿದ್ದ ಯುವ ಹೋರಾಟಗಾರರ ವಿರುದ್ಧ ರೌಡಿಶೀಟರ್ ಕೇಸ್ ದಾಖಲಿಸಿದೆ.

ಕೇಸ್ ದಾಖಲಿಸುವ ಮೂಲಕ, ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಕನ್ನಡ ವಿರೋಧಿ ನಡೆ ಅನುಸರಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕನ್ನಡ ಪರ ಹೋರಾಟಗಾರರಾದ ಅನಿಲ್ ದಡ್ಡಿ, ಸಂಪತ್ ಕುಮಾರ್ ದೇಸಾಯಿ 2021 ರಲ್ಲಿ ಮಹಾ ಮೇಳಾವ್ ಆಯೋಜಿಸಿದ್ದ ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಕಪ್ಪು ಮಸಿ ಬಳಿದಿದ್ದರು.

ಪೀರಣವಾಡಿ ಸಂಗೊಳ್ಳಿ ರಾಯಣ್ಣ ಹೋರಾಟದಲ್ಲಿ ಭಾಗವಹಿಸಿದ್ದ ಯುವ ಹೋರಾಟಗಾರರ ಮೇಲೆ ರೌಡಿಶೀಟ್ ತೆರೆಯಲಾಗಿದ್ದು ನಗರ ಪೊಲೀಸರು ನೋಟೀಸ್ ಜಾರಿಗೊಳಿಸಿದ್ದಾರೆ.

ಸಂಪತಕುಮಾರ್ ದೇಸಾಯಿ ವಿರುದ್ಧ ನಗರದ ಎಂಪಿಎಂಸಿ ಪೊಲೀಸ್ ಠಾಣೆಯಿಂದ, ಅನಿಲ್ ದಡ್ಡಿ ಅವರಿಗೆ ಟಿಳಕವಾಡಿ ಪೊಲೀಸ್ ಠಾಣೆಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಈ ನೋಟಿಸ್ ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇರುವುದರಿಂದ 50 ಸಾವಿರ ರೂ. ಮೊತ್ತದ ಸ್ವಯಂ ಮುಚ್ಚಳಿಕೆ ಹಾಗೂ ಇಬ್ಬರು ಸಾಕ್ಷಿಗಳ ಮುಚ್ಚಳಿಕೆ ಪಡೆಯಲು ಮುಂದಾಗಿದೆ.