ಧಾರವಾಡ: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಹೆಸರು ಮತ್ತು ಉದ್ದಿನ ಕಾಳು ಖರೀದಿಸಲು ಧಾರವಾಡ ಎಪಿಎಂಸಿ ಆವರಣದಲ್ಲಿ ಧಾರವಾಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿಂದ ಆರಂಭಿಸಿರುವ ಹೆಸರು ಮತ್ತು ಉದ್ದಿನ ಕಾಳು ಖರೀದಿ ಕೇಂದ್ರಕ್ಕೆ ಶಾಸಕ ಅಮೃತ ದೇಸಾಯಿ ಅವರು ಇಂದು ಬೆಳಿಗ್ಗೆ ಪೂಜೆ ಸಲ್ಲಿಸಿ, ಖರೀದಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಕೇಂದ್ರ ಸರ್ಕಾರದ ಆದೇಶದನ್ವಯ ಪ್ರತಿ ವರ್ಷದಂತೆ ರೈತರ ಅನಕೂಲಕ್ಕಾಗಿ ರೈತರಿಂದ ನೇರವಾಗಿ ಹೆಸರು ಕಾಳು ಮತ್ತು ಉದ್ದಿನ ಕಾಳು ಉತ್ಪನ್ನಗಳನ್ನು ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ಉತ್ತಮ ದರ ಪಡೆಯಬಹುದು. ಎಪ್.ಎ.ಕ್ಯೂ. ಗುಣಮಟ್ಟದ ಹೆಸರುಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಲ್ ಗೆ 7,775 ರೂ.ಗಳು ಮತ್ತು ಉದ್ದಿನಕಾಳು ಉತ್ಪನ್ನಗಳನ್ನು ಪ್ರತಿ ಕ್ವಿಂಟಲ್ ಗೆ 6600 ರೂ.ಗಳ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತದೆ.

ಧಾರವಾಡ ತಾಲೂಕಿನ ರೈತರಿಂದ ಹೆಸರು ಕಾಳು ಉತ್ಪನ್ನಗಳನ್ನು ಧಾರವಾಡ ಎಪಿಎಂಸಿ ಆವರಣದಲ್ಲಿ ಧಾರವಾಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿಂದ, ಹೆಬ್ಬಳ್ಳಿಯಲ್ಲಿ ಮತ್ತು ಉಪ್ಪಿನಬೆಟಗೇರಿಯಲ್ಲಿ ಅಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಖರೀದಿ ಮಾಡಲಾಗುತ್ತದೆ.

ಉದ್ದಿನಕಾಳು ಉತ್ಪನ್ನಗಳನ್ನು ಧಾರವಾಡ ಎಪಿಎಂಸಿ ಆವರಣದಲ್ಲಿ ಧಾರವಾಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿಂದ ಮತ್ತು ಉಪ್ಪಿನಬೆಟಗೇರಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಖರೀದಿ ಮಾಡಲಾಗುತ್ತದೆ.

ಹವಾಮಾನದ ವೈಪರೀತ್ಯದಿಂದಾಗಿ ಹೆಸರುಕಾಳು ಉತ್ಪನ್ನಗಳ ತೇವಾಂಶವು ನಿಗದಿತ ಎಫ್.ಎ.ಕ್ಯೂ.ಗುಣಮಟ್ಟಕ್ಕಿಂತ ಹೆಚ್ಚಿಗೆ ಬರುತ್ತಿದೆ. ಆದ್ದರಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಈ ಕುರಿತು ಮನವಿ ಮಾಡಿ, ತೇವಂಶದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಿದ್ದರೂ ರೈತರಿಂದ ಹೆಸರು ಮತ್ತು ಉದ್ದು ಖರೀದಿಸಲು ಕ್ರಮವಹಿಸಬೇಕೆಂದು ಮನವಿ ಮಾಡಲಾಗಿದೆ ಎಂದು ಶಾಸಕರು ತಿಳಿಸಿದರು.

ಸರಕಾರದ ಈ ಯೋಜನೆಯ ಲಾಭ ಪಡೆದು, ರೈತರು ಉತ್ತಮ ದರ, ಲಾಭ ಪಡೆದುಕೊಳ್ಳಬೇಕು. ಯಾವ ಕಾರಣಕ್ಕೂ ಮದ್ಯವರ್ತಿಗಳ ಮೊರೆ ಹೋಗಬಾರದು ಎಂದು ಅವರು ರೈತರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಧಾರವಾಡ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಮಲ್ಲಪ್ಪ ಹುಲ್ಲೂರ, ಉಪಾಧ್ಯಕ್ಷ ರಾಮಣ್ಣ ಕಣಾಜಿ, ನಿರ್ದೇಶಕ ಎಸ್.ಎಫ್.ಪಾಟೀಲ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಿವಾನಂದ ಕೆಲಗೇರಿ, ಧಾರವಾಡ ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಉಪನಿರ್ದೇಶಕ ವ್ಹಿ.ಎಂ.ಲಮಾಣಿ, ಧಾರವಾಡ ಎಪಿಎಂಸಿ ಕಾರ್ಯದರ್ಶಿ ವ್ಹಿ.ಜಿ.ಹಿರೇಮಠ ಸೇರಿದಂತೆ ಎಪಿಎಂಸಿ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.